ಉತ್ತಿಷ್ಠಭಾರತ (Uttishtabharatha) ಸುದ್ದಿ ಜಾಲತಾಣ ವರದಿ: ಭಾರತೀಯ ಸಶಸ್ತ್ರ ಪಡೆಗಳ ‘ಆಪರೇಷನ್ ಸಿಂದೂರ್‘ ಕಾರ್ಯಾಚರಣೆಯಿಂದ ಪಾಕಿಸ್ತಾನ ತತ್ತರಿಸಿದೆ.
ಈ ಕಾರ್ಯಾಚರಣೆಯ ವೇಳೆ ತನ್ನ ಪ್ರಮುಖ ನೂರ್ ಖಾನ್ ವಾಯುನೆಲೆಯ ಮೇಲೂ ದಾಳಿ ನಡೆದಿರುವುದನ್ನು ಪಾಕಿಸ್ತಾನ ಇದೇ ಮೊದಲ ಬಾರಿಗೆ ಅಧಿಕೃತವಾಗಿ ಒಪ್ಪಿಕೊಂಡಿದೆ.
ಪ್ರಾದೇಶಿಕ ಭದ್ರತೆ ಹಾಗೂ ಸೈನಿಕ ಸಮತೋಲನದ ಮೇಲೆ ಈ ಬೆಳವಣಿಗೆ ಮಹತ್ವದ ಪರಿಣಾಮ ಬೀರುವ ಸಾಧ್ಯತೆ ಇದೆ.
ಪಹಲ್ಗಾಂವ್ನಲ್ಲಿ ಭಾರತೀಯರ ಮೇಲೆ ಉಗ್ರರ ದಾಳಿಗೆ ಪ್ರತಿಯಾಗಿ ಮೇ ತಿಂಗಳಲ್ಲಿ ಭಾರತೀಯ ಸಶಸ್ತ್ರ ಪಡೆಗಳು ನಡೆಸಿದ ಆಪರೇಷನ್ ಸಿಂಧೂರ್ ಕಾರ್ಯಾಚರಣೆಯಿಂದ ತತ್ತರಿಸಿದ್ದ ಪಾಕಿಸ್ತಾನ, ಇದೀಗ ಮೊದಲ ಬಾರಿಗೆ ತನ್ನ ಮಿಲಿಟರಿ ನೆಲೆಗಳಿಗೆ ಹಾನಿಯಾಗಿರುವುದನ್ನು ಅಧಿಕೃತವಾಗಿ ಒಪ್ಪಿಕೊಂಡಿದೆ.
ಅಲ್ಲದೇ ತನ್ನ ಪ್ರಮುಖ ನೂರ್ ಖಾನ್ ವಾಯುನೆಲೆಯ ಮೇಲೂ ದಾಳಿ ನಡೆದಿರುವುದನ್ನು ಪಾಕಿಸ್ತಾನದ ಉಪಪ್ರಧಾನಿ ಹಾಗೂ ವಿದೇಶಾಂಗ ಸಚಿವ ಇಶಾಕ್ ದಾರ್ ಅವರು ಪತ್ರಿಕಾಗೋಷ್ಠಿಯಲ್ಲಿ ಈ ಸ್ಫೋಟಕ ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆ.
ಅಲ್ಲದೇ ದಾಳಿಗೆ ಹೆದರಿ ಬಂಕರ್ಗೆ ತೆರಳುವಂತೆ ಅಧ್ಯಕ್ಷ ಆಸಿಫ್ ಅಲಿ ಜರ್ದಾರಿಗೆ ಸಲಹೆಯನ್ನು ನೀಡಲಾಗಿತ್ತು ಎಂಬ ಸಂಗತಿಯೂ ಬೆಳಕಿಗೆ ಬಂದಿದೆ. ಈ ಮೂಲಕ ಪಾಕಿಸ್ತಾನ ಮತ್ತೊಮ್ಮೆ ಮುಜುಗರಕ್ಕೀಡಾಗಿದೆ.
ಏಪ್ರಿಲ್ 22ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ನಲ್ಲಿ ನಡೆದ ಭೀಕರ ಭಯೋತ್ಪಾದನಾ ದಾಳಿಯಲ್ಲಿ 26 ನಾಗರಿಕರು ಮೃತಪಟ್ಟಿದ್ದರು.
ಇದಕ್ಕೆ ಪ್ರತಿಯಾಗಿ ಭಾರತವು ಮೇ 7ರಂದು ‘ಆಪರೇಷನ್ ಸಿಂಧೂರ್’ ಅನ್ನು ಪ್ರಾರಂಭಿಸಿತು.
ಈ ಕಾರ್ಯಾಚರಣೆಯಡಿಯಲ್ಲಿ ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿರುವ ಒಂಬತ್ತು ಭಯೋತ್ಪಾದಕ ಕ್ಯಾಂಪ್ಗಳನ್ನು ಭಾರತೀಯ ಸೇನೆ ಧ್ವಂಸಗೊಳಿಸಿತ್ತು.
ನೂರ್ ಖಾನ್ ವಾಯುನೆಲೆ ಮೇಲೆ ಭಾರತದ ದಾಳಿ ಖಚಿತ
ರಾವಲ್ಪಿಂಡಿಯ ಚಕಲಾದಲ್ಲಿರುವ ಪಾಕಿಸ್ತಾನದ ಪ್ರಮುಖ ವಾಯುನೆಲೆ ‘ನೂರ್ ಖಾನ್ ಏರ್ ಬೇಸ್’ ಮೇಲೆ ಭಾರತೀಯ ಪಡೆಗಳು ದಾಳಿ ನಡೆಸಿರುವುದು ಮತ್ತು ಅದರಿಂದ ಮಿಲಿಟರಿ ಸ್ಥಾಪನೆಗಳಿಗೆ ಹಾನಿಯಾಗಿರುವುದು.
ಮಾತ್ರವಲ್ಲದೆ, ಅಲ್ಲಿನ ಸಿಬ್ಬಂದಿಗಳು ಗಾಯಗೊಂಡಿರುವುದನ್ನು ಇಶಾಕ್ ದಾರ್ ಖಚಿತಪಡಿಸಿದ್ದಾರೆ. ಈ ಮೂಲಕ ಪಾಕಿಸ್ತಾನವು ಜಾಗತಿಕ ವೇದಿಕೆಯಲ್ಲಿ ಮತ್ತೊಮ್ಮೆ ಮುಖಭಂಗ ಅನುಭವಿಸಿದೆ.
ಬಂಕರ್ನಲ್ಲಿ ಅಡಗುವಂತೆ ಸಿಫ್ ಅಲಿ ಜರ್ದಾರಿಗೆ ಸಲಹೆ
ಭಾರತದ ಭೀಕರ ದಾಳಿಗೆ ಹೆದರಿ ತಮ್ಮ ಮಿಲಿಟರಿ ಕಾರ್ಯದರ್ಶಿ ಬಂಕರ್ಗೆ ತೆರಳುವಂತೆ ಸಲಹೆ ನೀಡಿದ್ದರು ಎಂಬ ಸ್ಫೋಟಕ ಸತ್ಯವನ್ನು ಪಾಕಿಸ್ತಾನದ ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ ಒಪ್ಪಿಕೊಂಡಿದ್ದಾರೆ.
ಏಪ್ರಿಲ್ 26 ರಂದು ಪಹಲ್ಗಾಮ್ನಲ್ಲಿ 26 ನಾಗರಿಕರ ಹತ್ಯೆಗೆ ಪ್ರತೀಕಾರವಾಗಿ ಭಾರತವು ಮೇ 7, 2025 ರಂದು ‘ಆಪರೇಷನ್ ಸಿಂದೂರ್’ ಆರಂಭಿಸಿದಾಗ ಇಸ್ಲಾಮಾಬಾದ್ನ ಅಧಿಕಾರ ವರ್ಗದಲ್ಲಿ ತೀವ್ರ ಭೀತಿ ಆವರಿಸಿತ್ತು;
ಈ ವೇಳೆ ಜರ್ದಾರಿ ತಾವು ಬಂಕರ್ಗೆ ಹೋಗಲು ನಿರಾಕರಿಸಿರುವುದಾಗಿ ಮತ್ತು ಯುದ್ಧದ ಮುನ್ಸೂಚನೆ ತಮಗೆ ಮೊದಲೇ ಇತ್ತು ಎಂದು ಸಾರ್ವಜನಿಕವಾಗಿ ಹೇಳಿಕೊಂಡಿದ್ದರೂ,
ನಿವೃತ್ತ ಭಾರತೀಯ ಸೇನಾ ಅಧಿಕಾರಿಯೊಬ್ಬರು ಪಾಕಿಸ್ತಾನದ ಇಡೀ ರಾಜಕೀಯ ಮತ್ತು ಮಿಲಿಟರಿ ನಾಯಕತ್ವವು ಅಂದು ಪ್ರಾಣಭಯದಿಂದ ಬಂಕರ್ಗಳಲ್ಲಿ ಅವಿತು ಕುಳಿತಿತ್ತು ಎಂದು ಹೇಳಿದ್ದಾರೆ.
80 ಡ್ರೋನ್ ದಾಳಿಗಳ ಅಬ್ಬರ
ದಾಳಿಯ ತೀವ್ರತೆಯನ್ನು ವಿವರಿಸಿದ ದಾರ್, “ಭಾರತವು 36 ಗಂಟೆಗಳ ಅವಧಿಯಲ್ಲಿ ಪಾಕಿಸ್ತಾನದತ್ತ ಸುಮಾರು 80 ಡ್ರೋನ್ ಮುಖಾಂತರ ದಾಳಿ ನಡೆಸಿದೆ.
ನಾವು 79 ಡ್ರೋನ್ಗಳನ್ನು ಹೊಡೆದುರುಳಿಸಿದ್ದರೂ, ಒಂದು ಡ್ರೋನ್ ನಮ್ಮ ಮಿಲಿಟರಿ ನೆಲೆಯನ್ನು ಯಶಸ್ವಿಯಾಗಿ ಗುರಿಯಾಗಿಸಿ ಹಾನಿ ಮಾಡಿದೆ” ಎಂದು ಹೇಳಿದ್ದಾರೆ.
ಇದು ಭಾರತದ ತಾಂತ್ರಿಕ ಸಾಮರ್ಥ್ಯ ಮತ್ತು ನಿಖರತೆಯನ್ನು ಎತ್ತಿ ತೋರಿಸಿದೆ.
ಭಾರತದ ದಾಳಿ ಒಪ್ಪಿದ್ದ ಪ್ರಧಾನಿ ಶಹಬಾಜ್ ಷರೀಫ್
ಕೇವಲ ವಿದೇಶಾಂಗ ಸಚಿವರಷ್ಟೇ ಅಲ್ಲದೆ, ಪಾಕಿಸ್ತಾನದ ಪ್ರಧಾನಿ ಶಹಬಾಜ್ ಷರೀಫ್ ಕೂಡ ಈ ಹಿಂದೆ ಭಾರತದ ಬ್ಯಾಲಿಸ್ಟಿಕ್ ಕ್ಷಿಪಣಿಗಳ ದಾಳಿಯನ್ನು ಒಪ್ಪಿಕೊಂಡಿದ್ದರು.
ಮೇ 16ರಂದು ಮಾತನಾಡಿದ್ದ ಅವರು, “ಮೇ 10ರ ಮುಂಜಾನೆ ಸೇನಾ ಮುಖ್ಯಸ್ಥ ಜನರಲ್ ಅಸಿಮ್ ಮುನೀರ್ ನನಗೆ ಕರೆ ಮಾಡಿ ನೂರ್ ಖಾನ್ ಏರ್ ಬೇಸ್ ಮೇಲೆ ಭಾರತದ ಕ್ಷಿಪಣಿಗಳು ಅಪ್ಪಳಿಸಿವೆ ಎಂದು ಮಾಹಿತಿ ನೀಡಿದ್ದರು” ಎಂದು ಹೇಳಿದ್ದರು.
ಕದನ ವಿರಾಮಕ್ಕೆ ಮೊರೆ ಹೋದ ಪಾಕಿಸ್ತಾನ
ಭಾರತದ ನಿರಂತರ ಮತ್ತು ತೀವ್ರಗತಿಯ ದಾಳಿಯಿಂದ ಹೈರಾಣಾದ ಪಾಕಿಸ್ತಾನದ ಮಿಲಿಟರಿ ಕಾರ್ಯಾಚರಣೆಗಳ ಮಹಾನಿರ್ದೇಶಕರು, ಭಾರತದ ಡಿಜಿಎಂಒ ಅವರನ್ನು ಸಂಪರ್ಕಿಸಿ ಕದನ ವಿರಾಮಕ್ಕೆ ಪ್ರಸ್ತಾಪಿಸಿದ್ದರು.
ಭಾರತವು ಈ ಪ್ರಸ್ತಾಪವನ್ನು ಒಪ್ಪಿಕೊಂಡಿದ್ದು, ಸದ್ಯ ಭೂಮಿ, ಸಮುದ್ರ ಮತ್ತು ಆಕಾಶ ಮಾರ್ಗದಲ್ಲಿನ ಮಿಲಿಟರಿ ಕಾರ್ಯಾಚರಣೆಗಳನ್ನು ಸ್ಥಗಿತಗೊಳಿಸಲಾಗಿದೆ.



