ಬೆಂಗಳೂರಿನ ಸಮಸ್ಯೆಗಳ ಪರಿಹಾರಕ್ಕೆ ಸಂಬಂಧಿಸಿದಂತೆ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವಿವಿಧ ಪಾಲಿಕೆಗಳು ವಿವಿಧ ಹೊಸ ಕ್ರಮಗಳನ್ನು ಅಳವಡಿಸಿಕೊಳ್ಳುತ್ತಿವೆ.
ಇದೀಗ ಬೆಂಗಳೂರಿನ ದಕ್ಷಿಣ ನಗರ ಪಾಲಿಕೆಯಿಂದಲೂ ವಿನೂತನ ಕ್ರಮವನ್ನು ಅಳವಡಿಸಿಕೊಳ್ಳಲಾಗಿದೆ.
ಬೆಂಗಳೂರು ದಕ್ಷಿಣ ನಗರ ಪಾಲಿಕೆಯ ಆಯುಕ್ತರಾದ ಕೆ.ಎನ್ ರಮೇಶ್ ಅವರು ಶುಕ್ರವಾರ (ಡಿಸೆಂಬರ್ 19) ಜಯನಗರ ವಲಯ ವ್ಯಾಪ್ತಿಯಲ್ಲಿನ ಅಪಾರ್ಟ್ಮೆಂಟ್ ಹಾಗೂ ಸ್ಥಳೀಯ ನಿವಾಸಿಗಳ ಸಂಘ ಸಂಸ್ಥೆಯ ಪದಾಧಿಕಾರಿಗಳೊಂದಿಗೆ ನಿವಾಸಿಗಳ ಪ್ರಮುಖ ಕುಂದುಕೊರತೆಗಳ ಕುರಿತು ಚರ್ಚಿಸಲು ಸಭೆಗೆ ಆಹ್ವಾನಿಸಿದ್ದರು.
ಸಭೆಯಲ್ಲಿ ಸ್ಥಳೀಯ ನಿವಾಸಿಗಳ ಸಂಘದ ಪದಾಧಿಕಾರಿಗಳು ಪಾದಚಾರಿ ಮಾರ್ಗ ಒತ್ತುವರಿ, ಬೀದಿ ದೀಪ ಸಮಸ್ಯೆ, ಘನ ತ್ಯಾಜ್ಯ ಸಂಗ್ರಹಣೆ ಮತ್ತು ವಿಲೇವಾರಿ, ರಸ್ತೆ ಸಮಸ್ಯೆ, ಕಾನೂನಿಗೆ ವ್ಯತಿರಿಕ್ತವಾದ ಕಟ್ಟಡಗಳ ನಿರ್ಮಾಣ, ವಸತಿ ಪ್ರದೇಶಗಳಲ್ಲಿ ವಾಣಿಜ್ಯ ಚಟುವಟಿಕೆಗಳು, ಸಾರ್ವಜನಿಕ ಶೌಚಾಲಯ ನಿರ್ವಹಣೆ, ಇ-ಖಾತಾ ಹಾಗೂ ಇನ್ನಿತರ ಸಮಸ್ಯೆಗಳ ಕುರಿತು ಸಾರ್ವಜನಿಕರು ಪಾಲಿಕೆ ಆಯುಕ್ತರ ಗಮನಕ್ಕೆ ತಂದಿದ್ದಾರೆ.
ಸಮಸ್ಯೆಗಳ ಪಟ್ಟಿ ಮಾಡಿಕೊಂಡ ನಂತರ ಮಾತನಾಡಿರುವ ಆಯುಕ್ತರು ಕೆಲವೊಂದು ಸಮಸ್ಯೆಗಳಿಗೆ ಸ್ಥಳೀಯ ಮಟ್ಟದಲ್ಲಿ ಸಮಸ್ಯೆಗಳನ್ನು ಬಗೆಹರಿಸ ಬೇಕಾಗಿರುತ್ತದೆ.
ಇದಕ್ಕೆ ಸಾರ್ವಜನಿಕರಿಂದಲೂ ಸಹಕಾರ ಅಗತ್ಯವಿರುತ್ತದೆ. ಈ ಸಮಸ್ಯೆಗಳನ್ನು ಆಲಿಸಿ ಪರಿಹರಿಸಲು ವಾರ್ಡ್ ಮಟ್ಟದಲ್ಲಿ ಸಮಸ್ಯೆಗಳ ಅರಿವಿರುವ ಜನ ಸಮೂಹದ ಒಬ್ಬ ಪ್ರತಿನಿಧಿ ಗುರುತಿಸಬೇಕು.
ಅವರೊಂದಿಗೆ ಪಾಲಿಕೆಯ ಸ್ಥಳೀಯ ಮಟ್ಟದ ಅಧಿಕಾರಿಗಳ ಸಮನ್ವಯ ಸಾಧಿಸಲು ಅನುಕೂಲವಾಗುತ್ತದೆ ಎಂದಿದ್ದಾರೆ.
ಮುಂದುವರಿದು ಈಗಾಗಲೇ ಕೆಲವೊಂದು ಎನ್ಜಿಒಗಳು ನಗರ ವ್ಯಾಪ್ತಿಯಲ್ಲಿ ಘನತ್ಯಾಜ್ಯ ನಿರ್ವಹಣೆ ಕುರಿತಂತೆ ಅಧ್ಯಯನ ಮಾಡಿದ್ದು, ತ್ಯಾಜ್ಯ ಸಮಸ್ಯೆಗೆ ಹಲವಾರು ಸಲಹೆಗಳನ್ನು ನೀಡಿರುತ್ತಾರೆ.
ಅವುಗಳನ್ನು ಪರಿಣಾಮಕಾರಿಯಾಗಿ ಅಳವಡಿಸಿಕೊಳ್ಳಲು ಪಾಲಿಕೆ ಹಾಗೂ ನಾಗರಿಕರ ಸಮನ್ವಯತೆ ಅವಶ್ಯಕತೆ ಇರುತ್ತದೆ ಹಾಗೂ ಬ್ಲಾಕ್ ಸ್ಪಾಟ್ ಗಳು ಉಂಟಾಗದ ರೀತಿಯಲ್ಲಿ ನಿರ್ವಹಿಸಲು ಖಾಸಗಿ ಸಹಭಾಗಿತ್ವದಲ್ಲಿ ಕಸ ಕಿಯೋಸ್ಕ್ಗಳು ಹೆಚ್ಚೆಚ್ಚು ಕಾರ್ಯ ನಿರ್ವಹಿಸಬೇಕಿರುತ್ತದೆ ಎಂದು ತಿಳಿಸಿದ್ದಾರೆ.
ನಗರ ವಿನ್ಯಾಸಕ್ಕೆ ಸಂಬಂಧಿಸಿದಂತೆ ಪ್ರಸ್ತುತ ಬೆಂಗಳೂರು ನಗರದ ಪರಿಸ್ಥಿತಿಯನ್ನು ಆಳವಾಗಿ ಅಧ್ಯಯನ ಮಾಡಿ ವಸ್ತುನಿಷ್ಠ ವರದಿ ನೀಡುವ ಕುರಿತು ಖಾಸಗಿ ಸಂಸ್ಥೆಗಳು ಮುಂದಾಗಿ ವಿನೂತನ ಆಲೋಚನೆಗಳನ್ನು ನೀಡಬಹುದಾಗಿರುತ್ತದೆ.
ಹಾಗೂ ನಗರ ಯೋಜನೆ ಹಾಗೂ ವಿನ್ಯಾಸ ಕುರಿತು ಕಾಲೇಜುಗಳ ವಿದ್ಯಾರ್ಥಿಗಳು ಅಧ್ಯಯನ ಮಾಡಿ ಸಲಹೆಗಳನ್ನು ನೀಡಬಹುದಾಗಿದೆ.
ಪಾಲಿಕೆಯ ಕೆಲಸಕಾರ್ಯಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರತಿನಿತ್ಯ ಪೋಸ್ಟ್ ಮಾಡಲಾಗುತ್ತಿದ್ದು, ಪಾಲಿಕೆಯ ಸಾಮಾಜಿಕ ಜಾಲತಾಣವನ್ನು ಅನುಸರಿಸುವಂತೆ ಹೇಳಿದ್ದಾರೆ.
ಈಗಾಗಲೇ ತಿಳಿಸಿರುವಂತೆ ಮುಂದಿನ ವಾರದಲ್ಲಿ ಒಂದು ದಿನ ಒಂದು ಭೇಟಿ ನೀಡಿ ಸ್ಥಳೀಯ ಸಮಸ್ಯೆಗಳ ಕುರಿತು ಸ್ಥಳ ಪರಿಶೀಲನೆ ನಡೆಸಿ ಸಂಬಂಧಿಸಿದ ಅಧಿಕಾರಿಗಳಿಗೆ ಸಮಸ್ಯೆ ಪರಿಹರಿಸಲಾಗುವುದು ಎಂದು ತಿಳಿಸಿದರು.
ಸಭೆಯಲ್ಲಿ ಶ್ರೀರಾಮ್ ಸಿಂಫೊನಿ ಅಪಾರ್ಟ್ಮೆಂಟ್, ಕನಕಪುರ ರಸ್ತೆ ಅಪಾರ್ಟ್ಮೆಂಟ್ ನಿವಾಸಿಗಳ ಸಂಘ, ಅಂಜನಾಪುರ ಬಡಾವಣೆ ನಿವಾಸಿಗಳ ಸಂಘ ಹಾಗೂ ಬಾಲಾಜಿಲೇಔಟ್ ಅಪಾರ್ಟ್ಮೆಂಟ್ ನಿವಾಸಿಗಳ ಹಾಗೂ ಸ್ಥಳೀಯ ನಿವಾಸಿಗಳ ಸಂಘಗಳ ಪ್ರತಿನಿಧಿಗಳು ಇದ್ದರು.




Very good
Hungry